Saturday 28 January, 2012

ಕೆ.ಎಸ್.ನರಸಿಂಹಸ್ವಾಮಿ ೨೬-೧-೧೯೧೫


ಕಾವ್ಯಪಂಡಿತರಿಗಷ್ಟೇ ಅಲ್ಲ ಪಾಮರರನ್ನೂ ರಂಜಿಸ ಬಲ್ಲದು. ಇದಕ್ಕೆ ನಿದರ್ಶನ ಕೆ.ಎಸ್.ನ. ಸಾಮಾನ್ಯರನ್ನು ತನ್ನತ್ತ ಎಳೆದದ್ದೇ ಇವರ ಪದ್ಯಗಳು. ಯುವ ಪ್ರೇಮಿಗಳಿಗೆ, ದಂಪತಿಗಳಿಗೆ ಹರ್ಷೋತ್ಪತ್ತಿ ಮಾಡಿದ್ದೇ ಮೈಸೂರು ಮಲ್ಲಿಗೆ. ೨೬ ಮುದ್ರಣ (೨೦೦೩) ಇವರ ಪ್ರಖ್ಯಾತಿಗೆ ಸಾಕ್ಷಿ. ಕನ್ನಡ ನಾಡಿಗೇ ಪಸರಿಸಿತು ಮಲ್ಲಿಗೆಯ ಕಂಪು.
ಕೆ.ಎಸ್.ನ. ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕಿಕ್ಕೇರಿ. ತಂದೆ ಸುಬ್ಬರಾಯರು, ತಾಯಿ ನಾಗಮ್ಮ. ಆರಂಭದ ಶಿಕ್ಷಣ ಮೈಸೂರು ಟ್ರೈನಿಂಗ್ ಕಾಲೇಜಿನ ಶಿಕ್ಷಣ ಸಂಸ್ಥೆಯಲ್ಲಿ. ಮಹಾರಾಜ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಜ್ಯೂನಿಯರ್ ಬಿ.ಎ. ತಂದೆಯ ನಿಧನ. ಓದು ಅಪೂರ್ಣ. ೧೯೩೬ರಲ್ಲಿ ತಿಪಟೂರಿನಲ್ಲಿ ವೆಂಕಮ್ಮನೊಂದಿಗೆ ವಿವಾಹ. ಮೈಸೂರಿನಲ್ಲಿ ಸರ್ಕಾರಿ ನೌಕರಿ. ನಂಜನಗೂಡು ಬೆಂಗಳೂರಿನಲ್ಲಿ ಸೇವಾವಧಿ. ೧೯೭೦ರಲ್ಲಿ ನಿವೃತ್ತಿ.

ಕೆ.ಎಸ್.ನ. ಪ್ರಧಾನವಾಗಿ ಕವಿ. ಮೌಲಿಕ ಕೃತಿಗಳ ಅನುವಾದವೂ ಸೇರಿವೆ. ಎ.ಆರ್.ಕೃಷ್ಣಶಾಸ್ತ್ರಿ, ಕುವೆಂಪು, ತೀ.ನಂ.ಶ್ರೀ., ವಿ.ಸೀ. ಗೋಪಾಲಕೃಷ್ಣ ಅಡಿಗ ಮೊದಲಾದವರ ನಿಕಟ ಸಂಪರ್ಕ-ಪ್ರಭಾವ. ಮೊದಲ ಕವನ ಸಂಗ್ರಹ ಮೈಸೂರು ಮಲ್ಲಿಗೆ ೧೯೪೨ರಲ್ಲಿ ಪ್ರಕಟ. ಐರಾವತ, ದೀಪದಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ, ದುಂಡುಮಲ್ಲಿಗೆ, ನವಿಲದನಿ, ಸಂಜೆಹಾಡು, ಕೈಮರದ ಬಾಗಿಲು, ದೀಪ ಸಾಲುಗಳ ನಡುವೆ ಮುಂತಾದ ಕವನ ಸಂಗ್ರಹಗಳು. ಬಣ್ಣದ ಚಿಟ್ಟೆ, ಬೆಟ್ಟದ ಗೌರಿ, ಕಂಬನಿ, ನಿನ್ನ ಹೆಸರು, ಚಿತ್ರವಳ್ಳಿಯ ಚೆಲುವೆಯರು ಮುಂತಾದ ಕವನಗಳ ಅನುವಾದ.

ಅಬ್ಬರವಿರದ, ಆಡುಮಾತಿನ, ಲಯಕ್ಕೆ ಹತ್ತಿರದ, ಭಾಷೆಯ ಸೂಕ್ಷ್ಮ ಸಂವೇದನೆಯ ಅಭಿವ್ಯಕ್ತವೇ ಕೆ.ಎಸ್.ನ. ಪದ್ಯದ ಪ್ರಮುಖ ಅಂಶ, ಪಡೆದ ಜನಪ್ರಿಯತೆ.

ಅರಸಿ ಬಂದ ಪ್ರಶಸ್ತಿಗಳು ಹಲವಾರು. ದೇವರಾಜ ಬಹದ್ದೂರ್ ಬಹುಮಾನ, ರಾಜ್ಯ ಸಂಸ್ಕೃತಿ ಶಾಖೆ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ೧೯೯೦ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಾಸ್ತಿ ಪ್ರಶಸ್ತಿ, ಪಂಪ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿಗಳಿಗೆ ಭಾಜನರಾದವರು. ೧೯೭೦ರಲ್ಲಿ ಪ್ರೀತಿಯಿಂದ ಅರ್ಪಿಸಿದ ಗೌರವ ಗ್ರಂಥ ‘ಚಂದನ.’ ನಿಧನರಾದದ್ದು ೨೮.೧೨.೨೦೦೩ರಲ್ಲಿ.

No comments:

Post a Comment