Friday 3 February, 2012

ಪ್ರೊ. ಎಚ್. ತಿಪ್ಪೆರುದ್ರ ಸ್ವಾಮಿ ೩-೨-೧೯೨೮ ಯಿಂದ ೨೮.೧೦.೧೯೯೪


ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯ ಬಡಕುಟುಂಬದಲ್ಲಿ. ಮೂರು ತಿಂಗಳ ಮಗುವಾಗಿದ್ದಾಗಲೇ ತಾಯಿಯ ಪ್ರೀತಿಯಿಂದ ವಂಚಿತರು. ಚೆನ್ನಜ್ಜಿಯ ಲಾಲನೆ ಪಾಲನೆಯಲ್ಲಿ ಬೆಳೆದ ಹುಡುಗ. ಅಜ್ಜಿಯ ಬಾಯಿಂದ ಹೊರಡುತ್ತಿದ್ದ ಶರಣ ಧರ‍್ಮದ ಹಾಡುಗಳಿಂದ ಪ್ರೇರಿತ. ಆಗಲೇ ಅನುಭಾವ ಪ್ರಪಂಚಕ್ಕೆ ಪ್ರವೇಶ. ಹೊನ್ನಾಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ. ಪ್ರೌಢಶಾಲೆಗೆ ಬಂದಾಗ ಗಾಂಧೀ ಹುಚ್ಚು ಹತ್ತಿ ಚಳವಳಿಗೆ ಇಳಿದದ್ದು. ‘ಗಾಂತಾತನ ರೈಲು ಟಿಕೆಟ್ ಕೊಳ್ಳಬೇಡಿ !’ ಎಂದು ಘೋಷಿಸಿದ ಧೈರ‍್ಯಶಾಲಿ ಹುಡುಗ. ಹುಡುಗನೆಂದು ಪೊಲೀಸರ ಅಲಕ್ಷ್ಯ. ಮುಂದೆ ಚಳವಳಿಯ ಕಾವಿಗೆ ಸಿಕ್ಕಿಕೊಂಡು ಖಾದಿ ವ್ರತ ಧರಿಸಿದರು.

ತಂದೆಗೆ, ಮಗ ವೈದ್ಯನಾಗಬೇಕೆಂಬ ಆಸೆ. ತಿಪ್ಪೇಸ್ವಾಮಿಯವರು ಆರಿಸಿಕೊಂಡದ್ದು ಕನ್ನಡ ಆನರ್ಸ್‌. ಗಿಟ್ಟಿಸಿದ್ದು ಮೊದಲ ಸ್ಥಾನ-ಚಿನ್ನದ ಪದಕ. ಎಂ.ಎ.ನಲ್ಲೂ ಇದೇ ಪುನರಾವರ್ತನೆ. ಹಲವಾರು ಕಾಲೇಜುಗಳಲ್ಲಿ ಬೋಸಿ ಮಾನಸ ಗಂಗೋತ್ರಿಗೆ ಬರುವ ವೇಳೆಗೆ ಡಾಕ್ಟರ್ ತಿಪ್ಪೇರುದ್ರಸ್ವಾಮಿ. ಮಾಡಿದ್ದು  ಶರಣರ ಅನುಭಾವ ಸಾಹಿತ್ಯ ಕುರಿತ ಅಧ್ಯಯನ ಸಂಶೋಧನೆ. ಎರಡು ವರ್ಷ ಅಂಚೆ ಮತ್ತು ತೆರಪಿನ ಶಿಕ್ಷಣದ ನಿರ್ದೇಶಕರ ಹೊಣೆ. ನಂತರ ಶಿವಮೊಗ್ಗ  ಬಿ.ಆರ್. ಪ್ರಾಜೆಕ್ಟ್  ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ವರ್ಗ. ಪ್ರಾಧ್ಯಾಪಕರಾಗಿ ಹತ್ತು ವರ್ಷ. ಮತ್ತೆ ಗಂಗೋತ್ರಿಗೆ-ಅಧ್ಯಯನ ಸಂಸ್ಥೆಯ ನಿರ್ದೇಶಕರ ಹೊಣೆಗಾರಿಕೆ.

ರಚಿಸಿದ ಸಾಹಿತ್ಯ ಮೂರು ಬಗೆ-ಶರಣರ ಅನುಭಾವ ಸಾಹಿತ್ಯ, ಶರಣರ ಬದುಕಿನ ಕಾದಂಬರಿ, ಕರ್ನಾಟಕ ಸಂಸ್ಕೃತಿಯ ಆಳವಾದ ಅಧ್ಯಯನ. ವಚನಗಳಲ್ಲಿ ವೀರಶೈವಧರ‍್ಮ, ಪರಿಪೂರ್ಣದೆಡೆಗೆ, ಕದಳಿ ಕರ್ಪೂರ, ಜ್ಯೋತಿ ಬೆಳಗುತಿದೆ, ಕರ್ತಾರನ ಕಮ್ಮಟ, ಶೂನ್ಯ ತತ್ತ್ವ ವಿಕಾಸ ಮತ್ತು ಸಂಪಾದನೆ. ನಿಜಗುಣಶಿವಯೋಗಿ, ಶರಣರ ಮೂರು ನಾಟಕಗಳು-ಜೊತೆಗೆ ಹಲವಾರು ಕಾದಂಬರಿ, ಕಥೆಗಳ ಕರ್ತೃ.

ಸಂದ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಹಿತೈಷಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ಶಿವಚಿಂತನ’. ನಿಧನರಾದದ್ದು ೨೮.೧೦.೧೯೯೪ರಲ್ಲಿ.

No comments:

Post a Comment