Saturday 28 January, 2012

ಸಾ.ಶಿ. ಮರುಳಯ್ಯ ೨೮-೧-೧೯೩೧

ಸಾ.ಶಿ.ಮ.ರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮ. ತಂದೆ ಶಿವರುದ್ರಯ್ಯ, ತಾಯಿ ಸಿದ್ದಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಸಾಸಲು ಗ್ರಾಮದಲ್ಲಿ. ಶೆಟ್ಟಿ ಕೆರೆಯಲ್ಲಿ ಮಾಧ್ಯಮಿಕ, ಹೈಸ್ಕೂಲು ಸೇರಿದ್ದು ತಿಪಟೂರು. ಕಾಲೇಜು ಓದಿದ್ದು ಚಿತ್ರದುರ್ಗ. ಇಂಟರ್ ಮುಗಿಸಿ ಮ್ಯಾಂಗನೀಸ್ ಗಣಿಯ ಕಂಟ್ರಾಕ್ಟರ್ ಬಳಿ ಗುಮಾಸ್ತೆ ಕಲಸ. ಕೂಡಿಟ್ಟ ಹಣದಿಂದ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರಿಗೆ ಪ್ರಯಾಣ. ಆನರ್ಸ್‌ನಲ್ಲಿ ಡಿ.ಎಲ್.ಎನ್., ದೇಜಗೌ., ತ.ಸು.ಶಾ., ಎಸ್.ವಿ. ರಂಗಣ್ಣ, ಎಸ್.ವಿ. ಪರಮೇಶ್ವರ ಭಟ್ಟರು ಮುಂತಾದ ವಿದ್ವಾಂಸರ ಮಾರ್ಗದರ್ಶನ. ಎಂ.ಎ. ಓದಲು ಅಡಚಣೆ. ಪುನಃ ಉದ್ಯೋಗ. ಚಾಮರಾಜನಗರ ಕಾಲೇಜಿನ ಅರೆಕಾಲಿಕ ಉಪಾಧ್ಯಾಯ ವೃತ್ತಿ. ಎಂ.ಎ. ಮುಗಿಸುತ್ತಿದ್ದಂತೆ ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಕಾಲೇಜಿನಲ್ಲಿ ಬೋಧನಾ ವೃತ್ತಿ. ಬೆಂಗಳೂರಿಗೆ ವರ್ಗಾವಣೆ. ಬಡ್ತಿ ಪಡೆದು ಪುನಃ ತುಮಕೂರು, ಚೆನ್ನಪಟ್ಟಣ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆ. ಅಲ್ಲಿಂದ ಮಂಗಳೂರು, ನಂತರ ಬೆಂಗಳೂರಿಗೆ-ರಾಜ್ಯಭಾಷಾ ಆಯೋಗದ ಸದಸ್ಯರಾಗಿ ನೇಮಕ. ಆರು ವರ್ಷದ ನಂತರ ನಿವೃತ್ತಿ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ೧೯೯೫-೧೯೯೮ರವರೆಗೆ. ಚಿತ್ರದುರ್ಗ ಕಾಲೇಜಿನಲ್ಲಿದ್ದಾಗಲೇ ಸಾಹಿತ್ಯ ಬರವಣಿಗೆ ಪ್ರಾರಂಭ. ಹಲವಾರು ಗ್ರಂಥಗಳ ಸಂಪಾದನೆ. ವಿಶ್ವಕೋಶದ ಪ್ರಧಾನ ಸಂಪಾದಕರು. ರಚಿಸಿದ ಕೃತಿಗಳು ಸುಮಾರು ಅರವತ್ತು. ಶಿವತಾಂಡವ, ಕೆಂಗನಕಲ್ಲು, ರಾಸಲೀಲೆ, ರೂಪಸಿ (ಕಾವ್ಯ) ; ಪುರುಷಸಿಂಹ, ಹೇಮಕೂಟ, ಸಾಮರಸ್ಯದ ಶಿಲ್ಪ (ಕಾದಂಬರಿ) ; ವಿಜಯವಾತಾಪಿ, ಎರಡು ನಾಟಕಗಳು, ಮರೀಬೇಡಿ ಮುಂತಾದ ನಾಟಕಗಳು ; ನೆಲದ ಸೊಗಡು-ಕಥಾಸಂಕಲನ. ವಚನ ವೈಭವ, ಸ್ಪಂದನ, ಅವಲೋಕನ ಮುಂತಾದ ಸಂಶೋಧನಾ ಕೃತಿಗಳು. ಮಾಸ್ತಿಯವರ ಕಾವ್ಯಸಮೀಕ್ಷೆ, ಅಭಿವ್ಯಕ್ತ, ಅನುಶೀಲನ ಮೊದಲಾದ ವಿಮರ್ಶಾ ಕೃತಿಗಳು.

ಸಂದ ಪ್ರಶಸ್ತಿಗಳು ಹಲವಾರು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ಎಚ್.ನರಸಿಂಹಯ್ಯ ಪ್ರಶಸ್ತಿ ಮುಖ್ಯವಾದವುಗಳು. ‘ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ’ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಹಿತೈಷಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ಇಷಾಂಶು ಮತ್ತು ಅಭಿಜ್ಞ’

No comments:

Post a Comment