Friday 15 June, 2012



ನಿರಂಜನ


೧೫.೬.೧೯೨೪

೧೩.೩.೧೯೯೨

‘ಆಳುವ ಪರಕೀಯರ ಹಂಗುಬೇಡ’ ಎಂದು ಎಸ್‌.ಎಸ್‌.ಎಲ್‌.ಸಿ.ಪ್ರಮಾಣ ಪತ್ರವನ್ನೇ ಸ್ವೀಕರಿಸದೆ ಕಾಸರಗೋಡಿನ ನೀಲೇಶ್ವರ ಹೈಸ್ಕೂಲಿನಿಂದ ಹೊರನಡೆದ ಸಮಾಜ ಸುಧಾರಕ, ರೈತ ಹೋರಾಟಗಾರ, ಸಾಹಿತ್ಯಚಳುವಳಿಯ ನೇತಾರ ಕುಳಕುಂದ ಶಿವರಾಯರು ಹುಟ್ಟಿದ್ದು ದ.ಕ. ಜಿಲ್ಲೆಯ ಕುಳಕುಂದದಲ್ಲಿ ೧೯೨೫ ರ ಜೂನ್‌ ೧೫ ರಂದು. ತಾಯಿ ಚಿನ್ನಮ್ಮ, ತಂದೆ ಶ್ರೀನಿವಾಸರಾಯರು. ಆರು ತಿಂಗಳು ಮಗುವಾಗಿದ್ದಾಗ ಮಗುವಿನೊಡನೆ ತಾಯಿ ಬಂದು ನೆಲೆಸಿದ್ದು ಕಾವು ಎಂಬ ಹಳ್ಳಿಯಲ್ಲಿ.

ಕಾವುನಲ್ಲಿ ಲೋಯರ್ ಎಲಿಮೆಂಟರಿ ಶಾಲೆಯಲ್ಲಿ ಮೂರು ವರ್ಷ ಓದಿದ ನಂತರ ಸುಳ್ಯದ ಹೈಯರ್ ಎಲಿಮೆಂಟರಿ ಶಾಲೆ. ಸುಳ್ಯದ ನಂತರ ಹೈಸ್ಕೂಲಿಗೆ ಸೇರಿದ್ದು ನೀಲೇಶ್ವರದ ರಾಜಾಸ್‌ ಹೈಸ್ಕೂಲು. ಅಷ್ಟರಲ್ಲಾಗಲೇ ಶಿವರಾಮ ಕಾರಂತರ ಮಕ್ಕಳ ಕೂಟ, ವಿಟ್ಲ-ಕನ್ಯಾನದ ಮಕ್ಕಳ ಕೂಟ, ಪುತ್ತೂರು ನಾಡಹಬ್ಬ ಮುಂತಾದೆಡೆ ಸ್ವಯಂಸೇವಕನಾಗಿ ರಾಜರತ್ನಂ, ಗೊರೂರು, ವಿ.ಸೀ, ಅ.ನ.ಕೃ., ಮುಂತಾದ ಗಣ್ಯ ಸಾಹಿತಿಗಳನ್ನು ಹತ್ತಿರದಿಂದ ಕಂಡದ್ದು.

ಹೈಸ್ಕೂಲಿನಲ್ಲಿದ್ದಾಗಲೇ ಕೈ ಬರಹದ ಪತ್ರಿಕೆಯನ್ನೂ ಹೊರಡಿಸಿ ಅದಕ್ಕಾಗಿ ಬರೆದ ಹಲವಾರು ಚಿಕ್ಕ ಚಿಕ್ಕ ಕತೆ, ಲೇಖನಗಳು. ಈ ಸಂದರ್ಭದಲ್ಲೆ ಕಮ್ಯೂನಿಸಂ ಪರಿಚಯ ಮಾಡಿಕೊಂಡು, ವರ್ಷಾರಂಭದಲ್ಲಿ ಕಾಸರಗೋಡು ತಾಲ್ಲೂಕು ವಿದ್ಯಾರ್ಥಿ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಯ ಜವಾಬ್ದಾರಿ.

ಶಿವರಾಯರ ಮೊದಲ ಬರಹ ಪ್ರಕಟವಾದುದು ಫಣಿಯಾಡಿಯವರ ತುಳು ಭಾಷೆಯ ‘ತುಳುನಾಡು’ ಪತ್ರಿಕೆಯಲ್ಲಿ ಕಿಶೋರ ಎಂಬ ಕಾವ್ಯನಾಮದಿಂದ.

ಎಸ್‌.ಎಸ್‌.ಎಲ್‌.ಸಿ.ಯ ನಂತರ ಮಂಗಳೂರಿಗೆ ತೆರಳಿದ ಶಿವರಾಯರು ಸೇರಿದ್ದು ರಾಷ್ಟ್ರ ಬಂಧು ಪತ್ರಿಕೆಯ ಉಪಸಂಪಾದಕರಾಗಿ. ಆದರೆ ಈ ಹಿಂದೆಯೇ ರಾಷ್ಟ್ರಬಂಧು ಪತ್ರಿಕೆಗೆ ಕಿಶೋರ, ಕುಳಕುಂದ, ಕತೆಗಾರ ಎಂಬ ಹೆಸರಿನಿಂದ ಚಿಕ್ಕ ಕತೆಗಳನ್ನೂ ಬರೆದು ಕಳುಹಿಸಿತೊಡಗಿದ್ದು, ಇವರ ವಿಳಾಸ ಕುಳಕುಂದ ಶಿವರಾಯ, ಟೋಲ್‌ಗೇಟ್‌, ಸುಳ್ಯ ಎಂದಿರುತ್ತಿದ್ದು ನಂತರ ನೀಲೇಶ್ವರದ ರಾಜಾಸ್‌ ಹೈಸ್ಕೂಲು ವಿಳಾಸ ನೀಡಿದಾಗ, ಇವರಾರೋ ವಯಸ್ಸಾದ ಶಾಲಾ ಪ್ರಾಧ್ಯಾಪಕರಾಗಿರಬೇಕೆಂದು ಭಾವಿಸಿದ್ದ ರಾಷ್ಟ್ರಬಂಧು ಪತ್ರಿಕೆಯವರು, ಶಿವರಾಯರು ಎಸ್‌.ಎಸ್‌.ಎಲ್‌.ಸಿ. ನಂತರ ಪತ್ರಿಕಾ ಕಚೇರಿಯನ್ನೂ ಪ್ರವೇಶಿಸಿದಾಗಲೇ ವಿದ್ಯಾರ್ಥಿ ಎಂದು ತಿಳಿದಾಗ ಆಶ್ಚರ್ಯಗೊಂಡರು. ರಾಷ್ಟ್ರಬಂಧು ಪತ್ರಿಕೆಯಲ್ಲಿದ್ದಾಗಲೇ ಬಸವರಾಜಕಟ್ಟೀಮನಿಯವರ ಉಷಾ ಪತ್ರಿಕೆಗೂ ಕತೆಗಳನ್ನೂ ಕಳುಹಿಸತೊಡಗಿದ್ದರು.

ಇವರ ಮೊದಲ ಕತಾ ಸಂಕಲನ ಅಯ್ಯನ್ಯೆ ಪ್ರಕಟವಾದಾಗ ಇವರಿಗೆ ೨೧ ರ ಹರೆಯ (೧೯೪೫).
ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಂಗಳೂರಿನ ತಾಯಿನಾಡು, DAILY NEWS, ಜನವಾಣಿ ದೈನಿಕಗಳಿಗೆ ಮಂಗಳೂರು ಸುದ್ದಿಗಾರರಾಗಿ, ನವಭಾರತ ಮತ್ತು ರಾಷ್ಟ್ರಬಂಧು ಸಾಪ್ತಾಹಿಕಕ್ಕೆ ನಗರ ಪ್ರತಿನಿಧಿಯಾಗಿಯೂ ದುಡಿದರು.

ಕಮ್ಯೂನಿಸ್ಟ್‌ ಪಕ್ಷದ ಸದಸ್ಯರಾಗಿ, ಅದರ ತತ್ತ್ವ ಪ್ರಣಾಳಿಕೆಯಲ್ಲಿ ಆಸಕ್ತಿ ಹೆಚ್ಚಿ, ದಾಸ್ಯದ ವಿರುದ್ಧ ದೇಶ ಸಂಘಟಿತವಾಗಬೇಕು, ಶೋಷಣೆಯ ವಿರುದ್ಧ ಹೋರಾಡಬೇಕು, ಬಡತನ, ದೀನತೆಗಳು ಹೋಗಿ ಸರ್ವರೂ ಸಮ ಸುಖಿಗಳಾಗಬೇಕು ಎಂದು ಬಯಸಿದರು.

ಕುಳಕುಂದ ಶಿವರಾಯರ ಸಂಪಾದಕತ್ವದಲ್ಲಿ ಹುಬ್ಬಳ್ಳಿಯಲ್ಲಿ ಕಮ್ಯೂನಿಸ್ಟ್‌ ವಾರಪತ್ರಿಕೆ ‘ಜನಶಕ್ತಿ’ಯನ್ನೂ ಪ್ರಾರಂಭಿಸಿದರಾದರೂ ಸೈದ್ಧಾಂತಿಕವಾಗಿ ಭ್ರಮನಿರಸನಹೊಂದಿ, ಕಮ್ಯುನಿಸ್ಟ್‌ ಪಕ್ಷವನ್ನು ತ್ಯಜಿಸಿದರು. ಪಕ್ಷದಿಂದ ಹೊರಬಂದ ನಂತರ ಹೊಸ ಹೊಟ್ಟು, ಹೊಸ ಹೆಸರಿನಿಂದಲೇ ಬರೆಯಬೇಕೆನಿಸಿ ‘ನಿರಂಜನ’ ಎಂಬ ಹೆಸರಿನಿಂದ (೧೯೫೧) ಬರೆಯತೊಡಗಿದರು.

ನಂತರ ಬೆಂಗಳೂರಿನ ಪ್ರಜಾಮತ ಸಹ ಸಂಪಾದಕರಾಗಿ ಸೇರ್ಪಡೆಯಾದರು. ೧೯೪೬ ರಲ್ಲಿ ಅಯ್ಯನೈ ಕಥಾಸಂಕಲನವು ‘ಸಂಧಿಕಾಲ’ ಎಂಬ ಹೊಸ ಆವೃತ್ತಿಯಾಗಿ ಪ್ರಕಟವಾದ ನಂತರ ೧೯೪೭ ರಲ್ಲಿ ‘ರಕ್ತಸರೋವರ’, ೧೯೫೨ ರಲ್ಲಿ ‘ಅನ್ನಪೂರ್ಣ’ ಕಥಾಸಂಕಲನಗಳು ಪ್ರಕಟಗೊಂಡವು.

ಪತ್ರಿಕೋದ್ಯಮ ಮತ್ತು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡ ನಿರಂಜನರು ಹಲವಾರು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯತೊಡಗಿದರು. ಬೆಂಗಳೂರಿನ ಪ್ರಜಾಮತ ವಾರಪತ್ರಿಕೆಯಲ್ಲಿ ಸರೂ ಕೇಳಿದೆಯಾ? (೧೯೪೫), ಉಷಾ ಪತ್ರಿಕೆಯಲ್ಲಿ ಸರೋಜ ಸಂಚಯ (೧೯೪೬), ಸಾಧನ ಸಂಚಯ (೧೯೫೧), [ಈ ಸಾಧನ ಸಂಚಯ ಅಂಕಣವು ಜನಪ್ರಗತಿಯಲ್ಲಿ ಮುಂದುವರೆಯಿತು] ಚಿತ್ರಗುಪ್ತ ಪತ್ರಿಕೆಯಲ್ಲಿ ಓದುಗರೊಡನೆ ಐದುನಿಮಿಷ (೧೯೫೨), ಹುಬ್ಬಳ್ಳಿಯ ಜನಶಕ್ತಿ ಪತ್ರಿಕೆಯಲ್ಲಿ ಸಂಗಾತಿಯ ಸಂಚಯ (೧೯೪೭), ದಾವಣಗೆರೆಯ ನವಶಕ್ತಿ ವಾರಪತ್ರಿಕೆಯಲ್ಲಿ ಬಿಸಿಲು ಬೆಳದಿಂಗಳು (೧೯೫೨) ಮುಂಬಯಿಯ ‘ಚೇತನ’ ಪತ್ರಿಕೆಯ ಮಾಸಿಕ ಅಂಕಣ (೧೯೫೨), ಹೈದರಾಬಾದಿನ ಸಾಧನ ವಾರಪತ್ರಿಕೆಯಲ್ಲಿ ಮಧುಸಂಚಯ (೧೯೫೬) ಮತ್ತು ಬೆಂಗಳೂರಿನ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಗಾಗಿ ‘ಬೇವು ಬೆಲ್ಲ’ (೧೯೬೨) ಇವು ವಿವಿಧ ಪತ್ರಿಕೆಗಳಲ್ಲಿ ನಿರ್ವಹಿಸಿದ ಅಂಕಣ ಬರಹಗಳು.

ಸಾಧನ ಸಂಚಯ ಅಂಕಣ ಬರಹಕ್ಕೆ ಮಾರುಹೋದ ಮತ್ತು ಉಷಾಪತ್ರಿಕೆಗೆ ಸಣ್ಣ ಪುಟ್ಟ ಕತೆಗಳನ್ನು ಆಗಾಗ್ಗೆ ಬರೆಯುತ್ತಿದ್ದ ವೆಂಕಟಲಕ್ಷ್ಮೀ (ಅನುಪಮಾ) ಯವರಿಗೆ ನಿರಂಜನರ ಪರಿಚಯವಾಗಿ, ಇವರೂ ನಿರಂಜನರ ವ್ಯಕ್ತಿತ್ವಕ್ಕೆ ಮಾರುಹೋದಾಗ ನಿಂಜನರು ಅನುಪಮರವನ್ನೂ ಮದುವೆಯಾದರು.

ವಿಮೋಚನೆ ಕಾದಂಬರಿಯನ್ನೂ ಬರೆದ ನಂತರ ಬನಶಂಕರಿ, ಸೌಭಾಗ್ಯ, ಅಭಯ, ರಂಗಮ್ಮನ ವಠಾರ ಮುಂತಾದ ಕಾದಂಬರಿಗಳನ್ನು ಬರೆದರು. ಹಲವಾರು ಕಾದಂಬರಿಗಳು ಮರುಮುದ್ರಣವಾದುದಲ್ಲದೆ ತೆಲುಗು, ಮಲಯಾಳಂ, ಭಾಷೆಗೂ ಅನುವಾದಗೊಂಡವು. ಚಿರಸ್ಮರಣೆ (೧೯೫೫) ಮತ್ತು ಮೃತ್ಯುಂಜಯ (೧೯೭೬) ಕಾದಂಬರಿಗಳು ಮಲಯಾಳಂ, ತೆಲುಗು, ತಮಿಳು, ಮರಾಠಿ, ಬಂಗಾಳಿ, ತುಳು, ಇಂಗ್ಲಿಷ್‌ ಭಾಷೆಗೂ ಭಾಷಾಂತರಗೊಂಡಿವೆ. ಇವರು ಅನುವಾದಿಸಿದ ಕಾದಂಬರಿಗಳು ತಾಯಿ (ಮಾಕ್ಸಿಂಗಾರ್ಕಿ ಕಾದಂಬರಿ) ‘ಮದುವಣಗಿತ್ತಿ, ಮಾನವನ ಪಾಡು, ಅಧಃಪತನ, ಚೀನಾದೇಶದ ನೀತಿ ಕಥೆಗಳು ಮುಂತಾದವುಗಳು.

ಸಾಹಿತ್ಯಾಸಕ್ತಿಯಿಂದ ತಮ್ಮ ಹರೆಯದ ವಯಸ್ಸಿನಿಂದಲೇ ಕಾಸರಗೋಡು ಸಮ್ಮೇಳನ (ಅಧ್ಯಕ್ಷರು-ತಿ.ತಾ.ಶರ್ಮ), ಮುಂಬಯಿಯ ಸಾಹಿತ್ಯ ಸಮ್ಮೇಳನ (ಅಧ್ಯಕ್ಷರು-ಗೋವಿಂದಪೈ), ಬೇಲೂರು ಸಾಹಿತ್ಯ ಸಮ್ಮೇಳನ (ಎಸ್‌.ಸಿ. ನಂದೀಮಠ), ಮೈಸೂರಿನಲ್ಲಿ ನಡೆದ ಸಮ್ಮೇಳನ (ಶಿವರಾಮ ಕಾರಂತರು) ಮುಂತಾದವುಗಳಲ್ಲಿ ಪ್ರತ್ಯಕ್ಷದರ್ಶಿಯಾಗಿ ಹಾಜರಾಗಿದ್ದರಲ್ಲದೆ ರಾಯಚೂರು ಸಮ್ಮೇಳನ (೧೯೫೫-ಆದ್ಯರಂಗಾಚಾರ್ಯ)ದಲ್ಲಿ ಲೇಖಕರ ಗೋಷ್ಠಿಯ ಅಧ್ಯಕ್ಷರಾಗಿಯೂ ಪಾಲ್ಗೊಂಡರು.

ಬೆಂಗಳೂರಿಗೆ ವಾಸ್ತವ್ಯವನ್ನು ಬದಲಿಸಿದಾಗ ಜಿ.ವೆಂಕಟಸುಬ್ಬಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿದ್ದಾಗ ಇವರು ಕಾರ್ಯದರ್ಶಿಯಾಗಿ ನಿಯೋಜಿತರಾಗಿ (೧೯೬೪) ಕೆಲ ತಿಂಗಳು ಕಾರ್ಯ ನಿರ್ವಹಿಸಿದರು. ಪರಿಷತ್ತಿನ ಈ ಕಾರ್ಯಗೌರವದಿಂದ ನಿರ್ಗಮಿಸಿದ ನಂತರ ಇಂಡಿಯನ್‌ ನ್ಯೂಸ್‌ ಅಂಡ್‌ ಫೀಚರ್ ಅಲಯನ್ಸ್‌ (ದೆಹಲಿಯ ಇನ್ಫಾ) ಸಂಸ್ಥೆಗೆ ಕಾರ್ಯನಿರತ ಪತ್ರಿಕೋದ್ಯಮಿಯಾಗಿ ‘ರಾಜಧಾನಿಯಿಂದ’, ಮತ್ತು ದಿನಚರಿಯಿಂದ ಎಂಬ ಎರಡು ಅಂಕಣಗಳನ್ನು ನಿರ್ವಹಿಸಿದರು.

ಸುಮಾರು ೨೫ ಕಾದಂಬರಿಗಳು; ೧೨ ಕಥಾ ಸಂಕಲನಗಳು; ಆರು ನಾಟಕಗಳು, ಜೀವನ ವೃತ್ತ, ವ್ಯಕ್ತಿಚಿತ್ರ ಸಂಗ್ರಹ; ಲೇಖನಗಳ ಸಂಗ್ರಹದ ೮ ಪುಸ್ತಕಗಳು; ಅಂಕಣ ಬರಹಗಳ ೮ ಕೃತಿಗಳು; ರಾಜಕೀಯ ಭಾಷಾಂತರದ ಸುಮಾರು ೧೫ ಕೃತಿಗಳಲ್ಲದೆ ಸಂಪಾದಕರಾಗಿ ಕನ್ನಡ ಸಾಹಿತ್ಯಕ್ಕೆ ಇವರು ನೀಡಿದ ಮಹತ್ವದ ಕೃತಿಗಳೆಂದರೆ ಕರ್ನಾಟಕ ಸಹಕಾರಿ ಪ್ರಕಾಶನದಿಂದ ೭ ಸಂಪುಟಗಳಲ್ಲಿ ಪ್ರಕಟವಾದ ‘ಜ್ಞಾನ ಗಂಗೋತ್ರಿ’ ಮತ್ತು ೨೫ ಸಂಪುಟಗಳಲ್ಲಿ ಪ್ರಕಟಗೊಂಡ ಜಗತ್ತಿನ ಶ್ರೇಷ್ಠ ಸಣ್ಣ ಕಥೆಗಳ ‘ ವಿಶ್ವಕಥಾ ಕೋಶ’ ಕನ್ನಡ ಸಾಹಿತ್ಯಕ್ಕೆ ವಿಶಿಷ್ಠ ಕೊಡುಗೆ. ಇದಲ್ಲದೆ ಜನತಾ ಸಾಹಿತ್ಯ ಪ್ರಕಾಶನದಿಂದ ೨೫ ಪುಸ್ತಕಗಳು, ಪುರೋಗಾಮಿ ಪ್ರಕಾಶನದಿಂದ ೮ ಕೃತಿಗಳು ಪ್ರಕಟಗೊಂಡಿವೆ.

ಇವರ ಸಾಹಿತ್ಯ ಕೊಡುಗೆಗಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸೋವಿಯತ್‌ ಲ್ಯಾಂಡ್‌ ನೆಹರು ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಸದಸ್ಯತ್ವ ಹಾಗೂ ಗೌರವ ಸಂಪುಟವಾಗಿ ಮುದ್ರಿಸಿದ ‘ಪ್ರತಿಧ್ವನಿ’ ಗ್ರಂಥ, ಪುತ್ತೂರಿನ ಕರ್ನಾಟಕ ಸಂಘದಿಂದ ೧೯೮೬ ರಲ್ಲಿ ಅರ್ಪಿಸಿದ ಗೌರವ ಗ್ರಂಥ ‘ನಿರಂಜನ ಅಭಿನಂದನ’.

ಹೀಗೆ ಸಾಹಿತ್ಯ, ಪತ್ರಿಕೋದ್ಯಮಗಳಿಗೆ ವಿಶಿಷ್ಠಕೊಡುಗೆ ನೀಡಿದ ನಿರಂಜನರು ಪಾರ್ಶ್ವವಾಯು ಪೀಡಿತರಾದರೂ ವಿಶ್ವಕಥಾಕೋಶದ ಯೋಜನೆಯನ್ನೂ ಪೂರ್ಣಗೊಳಿಸಿ ಕರ್ನಾಟಕ ಸಹಕಾರಿ ಪ್ರಕಾಶನಕ್ಕೆ ವಿದಾಯ ಹೇಳಿದರು. ಆದರೆ ಈ ಹಿಂದೆಯೇ ಅನುಪಮಾ ನಿಂಜನರವರನ್ನು ಕಾಡುತ್ತಿದ್ದ ಕ್ಯಾನ್ಸರ್ ಖಾಯಿಲೆಯು ಇವರನ್ನೂ ಧೃತಿಗೆಡಿಸಿತ್ತು. ಅನುಪಮಾರವರ ನಿಧನದ ನಂತರ (೧೫.೨.೯೧) ನಿರಂಜನರೂ ಸಾಹಿತ್ಯ ಲೋಕದಿಂದ ನಿರ್ಗಮಿಸಿದ್ದು ೧೯೯೨ ರ ಮಾರ್ಚ್ ೧೩ರಂದು.

No comments:

Post a Comment