Saturday 28 January, 2012

ಕೆ.ಎಸ್.ನರಸಿಂಹಸ್ವಾಮಿ ೨೬-೧-೧೯೧೫


ಕಾವ್ಯಪಂಡಿತರಿಗಷ್ಟೇ ಅಲ್ಲ ಪಾಮರರನ್ನೂ ರಂಜಿಸ ಬಲ್ಲದು. ಇದಕ್ಕೆ ನಿದರ್ಶನ ಕೆ.ಎಸ್.ನ. ಸಾಮಾನ್ಯರನ್ನು ತನ್ನತ್ತ ಎಳೆದದ್ದೇ ಇವರ ಪದ್ಯಗಳು. ಯುವ ಪ್ರೇಮಿಗಳಿಗೆ, ದಂಪತಿಗಳಿಗೆ ಹರ್ಷೋತ್ಪತ್ತಿ ಮಾಡಿದ್ದೇ ಮೈಸೂರು ಮಲ್ಲಿಗೆ. ೨೬ ಮುದ್ರಣ (೨೦೦೩) ಇವರ ಪ್ರಖ್ಯಾತಿಗೆ ಸಾಕ್ಷಿ. ಕನ್ನಡ ನಾಡಿಗೇ ಪಸರಿಸಿತು ಮಲ್ಲಿಗೆಯ ಕಂಪು.
ಕೆ.ಎಸ್.ನ. ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕಿಕ್ಕೇರಿ. ತಂದೆ ಸುಬ್ಬರಾಯರು, ತಾಯಿ ನಾಗಮ್ಮ. ಆರಂಭದ ಶಿಕ್ಷಣ ಮೈಸೂರು ಟ್ರೈನಿಂಗ್ ಕಾಲೇಜಿನ ಶಿಕ್ಷಣ ಸಂಸ್ಥೆಯಲ್ಲಿ. ಮಹಾರಾಜ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಜ್ಯೂನಿಯರ್ ಬಿ.ಎ. ತಂದೆಯ ನಿಧನ. ಓದು ಅಪೂರ್ಣ. ೧೯೩೬ರಲ್ಲಿ ತಿಪಟೂರಿನಲ್ಲಿ ವೆಂಕಮ್ಮನೊಂದಿಗೆ ವಿವಾಹ. ಮೈಸೂರಿನಲ್ಲಿ ಸರ್ಕಾರಿ ನೌಕರಿ. ನಂಜನಗೂಡು ಬೆಂಗಳೂರಿನಲ್ಲಿ ಸೇವಾವಧಿ. ೧೯೭೦ರಲ್ಲಿ ನಿವೃತ್ತಿ.

ಕೆ.ಎಸ್.ನ. ಪ್ರಧಾನವಾಗಿ ಕವಿ. ಮೌಲಿಕ ಕೃತಿಗಳ ಅನುವಾದವೂ ಸೇರಿವೆ. ಎ.ಆರ್.ಕೃಷ್ಣಶಾಸ್ತ್ರಿ, ಕುವೆಂಪು, ತೀ.ನಂ.ಶ್ರೀ., ವಿ.ಸೀ. ಗೋಪಾಲಕೃಷ್ಣ ಅಡಿಗ ಮೊದಲಾದವರ ನಿಕಟ ಸಂಪರ್ಕ-ಪ್ರಭಾವ. ಮೊದಲ ಕವನ ಸಂಗ್ರಹ ಮೈಸೂರು ಮಲ್ಲಿಗೆ ೧೯೪೨ರಲ್ಲಿ ಪ್ರಕಟ. ಐರಾವತ, ದೀಪದಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ, ದುಂಡುಮಲ್ಲಿಗೆ, ನವಿಲದನಿ, ಸಂಜೆಹಾಡು, ಕೈಮರದ ಬಾಗಿಲು, ದೀಪ ಸಾಲುಗಳ ನಡುವೆ ಮುಂತಾದ ಕವನ ಸಂಗ್ರಹಗಳು. ಬಣ್ಣದ ಚಿಟ್ಟೆ, ಬೆಟ್ಟದ ಗೌರಿ, ಕಂಬನಿ, ನಿನ್ನ ಹೆಸರು, ಚಿತ್ರವಳ್ಳಿಯ ಚೆಲುವೆಯರು ಮುಂತಾದ ಕವನಗಳ ಅನುವಾದ.

ಅಬ್ಬರವಿರದ, ಆಡುಮಾತಿನ, ಲಯಕ್ಕೆ ಹತ್ತಿರದ, ಭಾಷೆಯ ಸೂಕ್ಷ್ಮ ಸಂವೇದನೆಯ ಅಭಿವ್ಯಕ್ತವೇ ಕೆ.ಎಸ್.ನ. ಪದ್ಯದ ಪ್ರಮುಖ ಅಂಶ, ಪಡೆದ ಜನಪ್ರಿಯತೆ.

ಅರಸಿ ಬಂದ ಪ್ರಶಸ್ತಿಗಳು ಹಲವಾರು. ದೇವರಾಜ ಬಹದ್ದೂರ್ ಬಹುಮಾನ, ರಾಜ್ಯ ಸಂಸ್ಕೃತಿ ಶಾಖೆ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ೧೯೯೦ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಾಸ್ತಿ ಪ್ರಶಸ್ತಿ, ಪಂಪ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿಗಳಿಗೆ ಭಾಜನರಾದವರು. ೧೯೭೦ರಲ್ಲಿ ಪ್ರೀತಿಯಿಂದ ಅರ್ಪಿಸಿದ ಗೌರವ ಗ್ರಂಥ ‘ಚಂದನ.’ ನಿಧನರಾದದ್ದು ೨೮.೧೨.೨೦೦೩ರಲ್ಲಿ.

ಸಾ.ಶಿ. ಮರುಳಯ್ಯ ೨೮-೧-೧೯೩೧

ಸಾ.ಶಿ.ಮ.ರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮ. ತಂದೆ ಶಿವರುದ್ರಯ್ಯ, ತಾಯಿ ಸಿದ್ದಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಸಾಸಲು ಗ್ರಾಮದಲ್ಲಿ. ಶೆಟ್ಟಿ ಕೆರೆಯಲ್ಲಿ ಮಾಧ್ಯಮಿಕ, ಹೈಸ್ಕೂಲು ಸೇರಿದ್ದು ತಿಪಟೂರು. ಕಾಲೇಜು ಓದಿದ್ದು ಚಿತ್ರದುರ್ಗ. ಇಂಟರ್ ಮುಗಿಸಿ ಮ್ಯಾಂಗನೀಸ್ ಗಣಿಯ ಕಂಟ್ರಾಕ್ಟರ್ ಬಳಿ ಗುಮಾಸ್ತೆ ಕಲಸ. ಕೂಡಿಟ್ಟ ಹಣದಿಂದ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರಿಗೆ ಪ್ರಯಾಣ. ಆನರ್ಸ್‌ನಲ್ಲಿ ಡಿ.ಎಲ್.ಎನ್., ದೇಜಗೌ., ತ.ಸು.ಶಾ., ಎಸ್.ವಿ. ರಂಗಣ್ಣ, ಎಸ್.ವಿ. ಪರಮೇಶ್ವರ ಭಟ್ಟರು ಮುಂತಾದ ವಿದ್ವಾಂಸರ ಮಾರ್ಗದರ್ಶನ. ಎಂ.ಎ. ಓದಲು ಅಡಚಣೆ. ಪುನಃ ಉದ್ಯೋಗ. ಚಾಮರಾಜನಗರ ಕಾಲೇಜಿನ ಅರೆಕಾಲಿಕ ಉಪಾಧ್ಯಾಯ ವೃತ್ತಿ. ಎಂ.ಎ. ಮುಗಿಸುತ್ತಿದ್ದಂತೆ ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಕಾಲೇಜಿನಲ್ಲಿ ಬೋಧನಾ ವೃತ್ತಿ. ಬೆಂಗಳೂರಿಗೆ ವರ್ಗಾವಣೆ. ಬಡ್ತಿ ಪಡೆದು ಪುನಃ ತುಮಕೂರು, ಚೆನ್ನಪಟ್ಟಣ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆ. ಅಲ್ಲಿಂದ ಮಂಗಳೂರು, ನಂತರ ಬೆಂಗಳೂರಿಗೆ-ರಾಜ್ಯಭಾಷಾ ಆಯೋಗದ ಸದಸ್ಯರಾಗಿ ನೇಮಕ. ಆರು ವರ್ಷದ ನಂತರ ನಿವೃತ್ತಿ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ೧೯೯೫-೧೯೯೮ರವರೆಗೆ. ಚಿತ್ರದುರ್ಗ ಕಾಲೇಜಿನಲ್ಲಿದ್ದಾಗಲೇ ಸಾಹಿತ್ಯ ಬರವಣಿಗೆ ಪ್ರಾರಂಭ. ಹಲವಾರು ಗ್ರಂಥಗಳ ಸಂಪಾದನೆ. ವಿಶ್ವಕೋಶದ ಪ್ರಧಾನ ಸಂಪಾದಕರು. ರಚಿಸಿದ ಕೃತಿಗಳು ಸುಮಾರು ಅರವತ್ತು. ಶಿವತಾಂಡವ, ಕೆಂಗನಕಲ್ಲು, ರಾಸಲೀಲೆ, ರೂಪಸಿ (ಕಾವ್ಯ) ; ಪುರುಷಸಿಂಹ, ಹೇಮಕೂಟ, ಸಾಮರಸ್ಯದ ಶಿಲ್ಪ (ಕಾದಂಬರಿ) ; ವಿಜಯವಾತಾಪಿ, ಎರಡು ನಾಟಕಗಳು, ಮರೀಬೇಡಿ ಮುಂತಾದ ನಾಟಕಗಳು ; ನೆಲದ ಸೊಗಡು-ಕಥಾಸಂಕಲನ. ವಚನ ವೈಭವ, ಸ್ಪಂದನ, ಅವಲೋಕನ ಮುಂತಾದ ಸಂಶೋಧನಾ ಕೃತಿಗಳು. ಮಾಸ್ತಿಯವರ ಕಾವ್ಯಸಮೀಕ್ಷೆ, ಅಭಿವ್ಯಕ್ತ, ಅನುಶೀಲನ ಮೊದಲಾದ ವಿಮರ್ಶಾ ಕೃತಿಗಳು.

ಸಂದ ಪ್ರಶಸ್ತಿಗಳು ಹಲವಾರು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ಎಚ್.ನರಸಿಂಹಯ್ಯ ಪ್ರಶಸ್ತಿ ಮುಖ್ಯವಾದವುಗಳು. ‘ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ’ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಹಿತೈಷಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ಇಷಾಂಶು ಮತ್ತು ಅಭಿಜ್ಞ’